Total Pageviews

Monday 31 December 2012

ಹೊಸ ವರ್ಷದ ಹಾರ್ಧಿಕ ಶುಭಾಶಯಗಳು







ಹೊಸ ವರ್ಷದ ಹೊಸದಿನ
ಹೊಸ ಆಸೆಗಳೆಲ್ಲ ಹೊಸೆದುಕೊಳ್ಳಲಿ
ಈ ದಿನದಿಂದ ನಿಮ್ಮಾಸೆಗಳೆಲ್ಲ
ಹುಸಿಯಾಗದೆ ಹಸಿರಾಗಲಿ
ಈ ಕ್ಷಣದಿಂದ ನಿನ್ನ ಕನಸುಗಳೆಲ್ಲ ನನಸಾಗಲಿ
ಬದುಕು ಬಂಗಾರವಾಗಲಿ. 

ಹೊಸ ವರ್ಷದ ಶುಭಾಶಯಗಳು..
                 -- ಮೌನ ವೀಣೆ


Wednesday 26 December 2012

ಅನಿಸುತಿದೆ..

ಇಬ್ಬನಿಯಲಿ ನಾ ತೊಯ್ದು 
ನನ್ನ ಹೃದಯ ಮೃದುವಾಯ್ತು 
ನಿನ್ನ ನೆನಪಿನ ಗರಿಕೆ 
ಕ್ಷಣದಲ್ಲೇ ಹಸಿರಾಯ್ತು 
ನನ್ನೊಡಲಿನ  ಪ್ರೀತಿ 
ಮೊಗ್ಗರಳಿ ಹೂವಾಯ್ತು 
ಇಂತಿರಲು ನಾ ಕಂಡದ್ದು 
ಕನಸೆಂದು ನೋವಾಯ್ತು..

ಬೆಳದಿಂಗಳ ರಾತ್ರಿಯಲಿ 
ನಗುಮೊಗದ ಸರದಾರ 
ಬಾನ  ಚಂದ್ರನು ತಾನು 
ರೋಹಿಣಿ ಬಳಗವ ಕೂಡಿ 
ಮಧುಚಂದ್ರಕೆ ಹೊರಟಂತೆ 
ನೀ ಜೊತೆಗೆ ಇರದಿರಲು 
ನನ್ನ ನೋಡಿ ನಕ್ಕಂತೆ 
ಮೌನ ಗೌರಿಯ ಹಾಗೆ 
ನಾನೊಂಟಿ  ವನದಲ್ಲಿ.

ಅಲೆವ ಮನದೊಳಗಿಂದು 
ಜಿಗಿವ ಆಸೆಯ ಕಂತೆ 
ಸೋತ ಕಂಗಳವಳಗೆ
ನೂರು ಮಾತಿರುವಂತೆ 
ನೀನು ಎಲ್ಲಿಹೆಯೆಂದು 
ಮನವ ಕಾಡಿದೆ ಚಿಂತೆ
ಜೀವ ನಿನ್ನಾಸರೆಯ  
ಕಾಯುತಿಹುದು .....
            -- ಮೌನ ವೀಣೆ

Thursday 29 November 2012

ಕರೆದುಬಿಡು ಗೆಳತೀ


 
ಅನುಭಾವ ಅನುಭೂತಿ 
ಅಗಮ್ಯ ಪ್ರೀತಿಯಲಿ 
ಅನುಸರಿಸಿ ಸಂಗಾತಿ 
ನಡೆಯಲೂ ಜೊತೆಯಲ್ಲಿ 
ನಡುನಡುವೆ ನಗುತ 
ನೀನಾಡೋ ಮಾತಿನಲಿ 
ನಾ ಸ್ತಬ್ಧ ಗೆಳತೀ.!!
ನಿನ್ನ ಕುಡಿ ನೋಟದಲಿ ..

ಒಡನಾಟ ಭಾಂದವ್ಯ 
ಮಮಕಾರ ಎದೆತುಂಬಿ 
ನವಿರಾದ ಅನುರಾಗ 
ಅಭಿಮಾನ ಮನದುಂಬಿ 
ನನ್ನ ಕಳಕೊಂಡೆ ಗೆಳತೀ..!!
ನಿನ್ನ ಸಾಂಗತ್ಯದಲಿ 

ಹೆಸರಿಡು  ನನಗೊಂದು 
ನಿನ್ನೆದೆಯ ಗೂಡಿನಲ್ಲಿ 
ಕರೆದುಬಿಡು ನನ್ನನ್ನು 
ಕಣ್ರೆಪ್ಪೆ ಸದ್ದಿನಲ್ಲಿ 
ಮರೆತುಬಿಡುವೆನು ಗೆಳತೀ...
 ಈ ಜಗವ ಆ ಕ್ಷಣದಿ...

---- ಮೌನವೀಣೆ 

ಚಿತ್ರಕೃಪೆ : ಅಂತರ್ಜಾಲ

Tuesday 9 October 2012

ಅರಿಯದ ಭಾವಗಳು!!

 

ಎತ್ತ ಹೋಗಿದೆ ಏನು ಆಗಿದೆ 
ಒಂದೂ  ತಿಳಿಯದ ಜೀವನ 
ದಿಕ್ಕು ಕಾಣದೆ ಕಣ್ಮುಚ್ಚಿ ಸಾಗಿದೆ 
ನೀನು ಇಲ್ಲದ ಕಾರಣ.

ತಿಳಿಯದಾಗಿದೆ 
ನೆಪಗಳು ಕಾಡಿವೆ 
ಒಂಟಿ ಬದುಕಲಿ ಮೌನವು
ಹೇಳುವಾಸೆಯು ಹೆಸರೇ ತಿಳಿಯದು 
ಬಗೆಯೇ ಅರಿಯದ ಭಾವವು??!

ಮೂಕ ವಿಸ್ಮಿತ ಒಮ್ಮೆ ಭಾವುಕ
ಏನು ವಿಸ್ಮಯ ಜಗವಿದು 
ಎಲ್ಲ ಮರೆತಿದೆ ಬದುಕೇ ಕಲಿಸಿದೆ
ಏನೂ ಅರಿಯದೆ ನಗುವುದು.

Sunday 16 September 2012

ಇದು ನಮ್ಮ ಜೀವನ..



 ಒಮ್ಮೆ ಹರುಷ ಒಮ್ಮೆ ದುಃಖ
ನಲಿವುದೊಮ್ಮೆ ಅಳುವುದೊಮ್ಮೆ 
ಕನಸುಕಂಡು ಕುಣಿಯೋದೊಮ್ಮೆ
ಇದು ನಮ್ಮ ಜೀವನ..

ಮಳೆಯು ಒಮ್ಮೆ ಬಿಸಿಲು ಒಮ್ಮೆ 
ಇಂತಿರುವುದು ಶ್ರಾವಣ
ಒಮ್ಮೆ ಏಳು ಒಮ್ಮೆ ಬೀಳು
ಬದುಕೇ ಒಂದು ದಾರುಣ.

ಬಿಡದ ಮೋಹ ಪಡೆವ ದಾಹ
ಹಟದಿ ನಡೆದ ಮಾನವ
ಪಡೆವ ಛಲದಿ ಸಿಗುವ ಭರದಿ 
ಆಗಬೇಕೆ ದಾನವ!!??

ಸತ್ತ ಜೀವ ಬದುಕಲೆಂದು 
ದೇವ ನಿನಗೆ ಲಂಚ ಕೊಡುವೆ
ಆಸೆ ಜೀವ ಬದುಕಿ ಬಿಡಲಿ 
ನಿನ್ನ ಕರುಣೆ ಬೇಡುವೆ..



Wednesday 8 August 2012

ನನ್ನ ಅಮ್ಮನೇ..



ಅಮ್ಮ ನಿನ್ನ ಕನಸನೊಂದ 
ನನಸು ಮಾಡೋ
ಆಸೆ ನನಗೆ
ಬೆಟ್ಟದಷ್ಟು ಪ್ರೀತಿ ಕೊಟ್ಟು
ಎತ್ತಿ ನಗಿಸಿ 
ತುತ್ತು ಕೊಟ್ಟೆ
ಅಳುವ ಮೊಗಕೆ ಮುತ್ತು ಕೊಟ್ಟು
ಬೆಳೆಸಿ ಜೀವ ಮಮತೆ ಇಟ್ಟೆ.

ನಿನ್ನ ಬದುಕ ಬತ್ತಿ ಮಾಡಿ
ನನ್ನ ಬದುಕು ಬೆಳಗಲೆಂದು
ಕಷ್ಟ ಕೋಟಿ
ಛಲದಿ ತಡೆದೆ 
ನನ್ನ ದೈವವೇ ..

ನಿನ್ನ ಆಸೆ ಮರೆತು ಹಾಡಿ
ಕನಸು ಗುರಿಯ 
ಹಸನು ಮಾಡಲೆಂದು
ದುಡಿದೆ ಮನಸು ಮಾಡಿ
ನನ್ನ ಅಮ್ಮನೇ..


Friday 27 July 2012

ಜಾರುತಿದೆ ಮನಸು




ಜಾರಿಹೋಗಿದೆ ಮನಸು
ಅನಿಸಿದೆ...
ಜಾದೂವಾಗಿದೆ ನನಗೆ.
ಮೋಡಿ ಮಾಡಿದೆ ಮಳೆಯು
ಮಂದಗಾಳಿಯ ಕಳಿಸಿ.
ಬಿಡದೆ ಕಾದಿದೆ ನೆನಪು
ಕಾರಣಿಲ್ಲದ ಹುರುಪು!!!.

ಒಂಟಿ ಬಾಳಿಗೆ ನೀನು
ಅಂಟಿ ಬರುವೆನು ಎಂದೆ.,
ಗಂಟು ಹಾಕಿದ ಮೇಲೆ
ನಂಟು ಬೆಸೆಯುವುದಂತೆ..
ಮುಗ್ದ ಜೀವಕೆ ನೀನು
ಬೆಟ್ಟದಾಸರೆಯಂತೆ..
ನಿನ್ನ ಕಷ್ಟದೊಳೆಲ್ಲ
ನನಗೂ ಪಾಲಿದೆಯಂತೆ..
ಪ್ರೀತಿ ಕಡಲಿಗೆ ನೀನು
ಭದ್ರ ಸೇತುವೆಯಂತೆ..
ಮನದ ಮುಗಿಲಲಿ ನೀನು
ನಗುವ ನೇಸರನಂತೆ ...

ಚಿಗುರೊ ಬಳ್ಳಿಲಿ
ಹೊಸದು ಮೊಗ್ಗಾದ ಹಾಗೆ,
ತಾಯ ಹೆಸರ ಕೇಳಿ
ಮಗು ಕರೆದ ಹಾಗೆ,
ಮಳೆಯ ಮೋಡವ ಕಂಡು
ನವಿಲು ಕುಣಿಯುವ ಹಾಗೆ,
ನೀರಿಲ್ಲದೆ ಮೀನು
ಚಡಪಡಿಸುವಾ ಹಾಗೆ,
ನಿನ್ನ ಒಲವಿಗೆ ಹೃದಯ
ಮಿಡಿಯುವುದು ಹೀಗೆ...!!!

Tuesday 3 July 2012

ಸಾಗುತಿದೆ...


ಗುರಿ ಇಲ್ಲದ ಬದುಕು
ಬಯಸುವ ಮನ
ನಿಲುಕದ ಕನಸು***
ನೆನಪುಗಳ ತಡಕಾಟ
ಭಾವನೆಗಳ ಹೊಯ್ದಾಟ!
ಮುಗಿಯದ ದಾರಿ!!
ಭರವಸೆಯ ಬೆನ್ನಟ್ಟಿ ಸಾಗುತಿದೆ..


ದಾರಿಗಳು ಹಲವಾರು
ತವಕಗಳು ನೂರಾರು
ಮನದಲ್ಲಿ ದುಗುಡ!
ಕಣ್ಣಮುಚ್ಚಿ ಸಾಗುತಿದೆ,
ನೆಲೆ ಇಲ್ಲದ ಜೀವನ...


ಹಲವಾರು ಚಿಂತೆಗಳು
ಮುಗಿಯದದರ ಕಂತುಗಳು!
ನಡುಸುಳಿವ ಕವಲುಗಳು.!!
ದಿಕ್ಕೆಟ್ಟ ನಾವೆ,
ಎತ್ತಲೋ ಪಯಣ,
ಹುಚ್ಚೆದ್ದು ಸಾಗುತಿದೆ...

Wednesday 20 June 2012

ಪ್ರೀತಿ



ಮುಗುದೆಯೊಳಗಣ ಕುಸುಮದಂತೆ 
ನನ್ನೊಡಲ ಪ್ರೀತಿ 
ಹಿಗ್ಗಿ ಬಿರಿಯಲು ತವಕ.!!

ಕಟ್ಟೊಡೆದ ಕಡಲಂತೆ 
ನನ್ನ ಹೆಮ್ಮೆಯ ಪ್ರೀತಿ
ಜಾರಿ ಸಾಗುವ ತವಕ..!!

ತೇಲಿ ಓಡುವ ಮೋಡದ ತೆರದಿ
ನನ್ನಾಸೆಯ ಪ್ರೀತಿ
ಕರಗಿ ಹನಿಯಾಗುವ ತವಕ!!

ಮಲೆನಾಡ ಮಳೆಯಂತೆ
ಈ ಜೀವದ ಪ್ರೀತಿ
ತವಕದಲಿ ಮಿಡಿಯುತಿದೆ 
ಕಟ್ಟಿಕೊಳ್ಳಲು ಬದುಕ..

Photo credit goes to ಛಾಯಾ ಚಿತ್ತಾರಾ by Prakasha Hegde

Tuesday 5 June 2012

ಹಂಬಲ





ಇಳಿಸಂಜೆ ಕಳೆವಾಗ
ಮಳೆಯಲ್ಲಿ ನೆನೆದಾಗ
ನೀ ದೂರ ಇರುವಾಗ
ಹೇಗೆ ಕಳೆಯಲಿ ಸಮಯ.. 
ನಿನ ನೆನಪು ಬಂದಾಗ ?

ಕಲ್ಪನೆಯ ಕಾವ್ಯಗಳು
ಮನತುಂಬಿ ನಿಂತಾಗ
ನವಭಾವ ತುಂಬಿತುಂಬಿ..
ಮನಹಾಡಿದಾಗ..
ಈ ಜೀವ ನಿನ ಸನಿಹ 
ಹಂಬಲಿಸಿದಾಗ..
ಹೇಗೆ ಸಹಿಸಲಿ ವಿರಹ
ನೀನಿಲ್ಲದಾಗ ???

ನೆನಪಲ್ಲಿ ನನ್ನ ಹೃದಯ 
ಬಿಕ್ಕಳಿಸಿದಾಗ
ಬರುವೆನೆಂದರು ಬರದೆ 
ನೀ ಕಾಡಿದಾಗ..
ನೀ ಕೊಟ್ಟ ನವಿಲುಗರಿ
ಮರಿ ಹಾಕಿದಾಗ
ಹೇಗೆ ತೋರಲಿ ಗೆಳೆಯ
ನೀನಿಲ್ಲದಾಗ... 

Tuesday 29 May 2012

ನೀನು..

ಮನದಲ್ಲಿ ಮೊಳೆತ 
ಮಧುರ ಮಲ್ಲಿಗೆ ನೀನು..
ಭಾವದಲಿ ಬೆರೆತ 
ಬಾನಾಡಿ ನೀನು...

ಕನಸಲ್ಲಿ ಕರೆದ 
ಕನವರಿಕೆ ನೀನು..
ಮಧುವಲ್ಲಿ ಬೆರೆತ 
ಮಕರಂಧ ನೀನು..

ಬೆಳಕಲ್ಲಿ ಬೆರೆತ 
ಬೆಳದಿಂಗಳು ನೀನು..
ಪುಸ್ತಕದಲ್ಲಿರುವ 
ಮುಖಪುಟವೆ  ನೀನು.. 

ಕವಿಗಳಲ್ಲಿಯೇ ಶ್ರೇಷ್ಟ 
ಕವಿಪುಂಗವ ನೀನು..
ನನ್ನಲ್ಲಿ ಕಲೆತ 
ನನ್ನಾಸೆ ನೀನು..

ನನ್ನ ಹೃದಯವ ಕದ್ದ
ನನ್ನೊಡೆಯ ನೀನು..
ಅಂತರಂಗದಲ್ಲಿರುವ 
ಅಂತರಾತ್ಮವೇ ನೀನು..

Thursday 24 May 2012

ಕಷ್ಟ

ಬದುಕುವುದು ಕಷ್ಟ ಬರಗಾಲದಲ್ಲಿ
ನಡೆಯುವುದು ಕಷ್ಟ ಬರಿಗಾಲಿನಲ್ಲಿ
ಬಯಸಿದರೆ ಕಷ್ಟ ಬದಲಾಗದಲ್ಲಿ
ಬರೆಯುದು ಕಷ್ಟ ಬಹುಭಾಷೆಯಲ್ಲಿ

ಅಡಗುವುದು ಕಷ್ಟ ನಡುಬೀದಿಯಲ್ಲಿ
ಅಲೆಯುವುದು ಕಷ್ಟ ಪರನಾಡಿನಲ್ಲಿ
ಮರೆಯುವುದು ಕಷ್ಟ ಮನದಾಳದಲ್ಲಿ
ಕರೆಯುವುದು ಕಷ್ಟ ಜನಜಾತ್ರೆಯಲ್ಲಿ

Thursday 10 May 2012

ಆಶಯ

ಮನದಲ್ಲಿ ಗೊಂದಲವೇಕೆ?
ಬಯಕೆಗಳ ಬಾಂದಳವೇಕೆ?
ನಗನಾಣ್ಯದ ಹಂಬಲವೇಕೆ?
ಪ್ರಕ್ರತಿಯ ಸೊಭಗಿರಲು,
ಕಲ್ಪನೆಯ ಕಣ್ಣಿರಲು,
ಕನಸಿನ ಸಾಮ್ರಾಜ್ಯಕ್ಕೆ ಬೇರೆ
ಗೋಪುರ ಕಟ್ಟಬೇಕೆ?
ಸಣ್ಣ-ದೊಡ್ಡವ ಎಂಬ ಬೇಧವೇಕೆ?
ತುಚ್ಛ ಬೇಧದ ಭಾವವೇಕೆ??
ಕಟ್ಟಿದ ಕಾರ್ಮುಗಿಲು ದೂರಸರಿದಾಗ
ದುರಾಸೆಯ ಪಟ್ಟ ಕೊರಗೇಕೆ??
ಮನಪಕ್ಷಿಯ ಹಾರಿಬಿಡು;
ನೀಲಾಕಾಶದಲಿ ಕುಣಿಯುತಿರಲಿ.
ಕರುಣರಸ ಕಾರಂಜಿಯಂತೆ ಚಿಮ್ಮಿಬರಲಿ.
ಇದು ಹೊಸಬಾಳಿಗೆ,
ಹೊಸನಾಳೆಗೆ,
ಶುಭನಾಂಧಿಯ ಹಾಡುತಿರಲಿ...

Tuesday 8 May 2012

ತವಕ

ನನ್ನೊಳಗೆ ತವಕ 
ಒಳಗೊಳಗೆ ನಡುಕ 
ಹುರುಳಿಲ್ಲದ ಹುನ್ನಾರ 
ಅವಿತಿಹುದು ಒಳಗೆ!!.

ಹುಚ್ಚು ಬೆಚ್ಚನೆ ಕನಸು
ಹೆಚ್ಚಿ ಹರಿಯುವ ವಯಸು
ಹುಚ್ಚು ಕೋಡಿಯ ಮನಸು 
ಬಯಸಿ ಕಾಯುತಲಿಹುದು..!!

ಬಗೆಹರಿಯದಾ.. ಕಲಹ 
ಬಲಿಯಿರಲು ನೀ ಸನಿಹ 
ಮೌನದೊಳಗಿನ ಮಾತಿಗೆ 
ದನಿಯಿಲ್ಲವೆಕೆ???

Wednesday 25 April 2012

ಸ್ನೇಹ


ಯಾವ ಜನುಮದ ನಂಟೋ ಏನೋ 
ನಿನ್ನ ಸ್ನೇಹವ ಪಡೆದಿಹೆ
ಎಲ್ಲಿಯದೋ ಸಂಬಂಧವೇನೋ 
ನನ್ನ ನಿನ್ನೆದೆ ಸೆಳೆದಿದೆ

ನಿನ್ನ ಸ್ನೇಹದ ಮೂರ್ತಿ ಕೆತ್ತಿದೆ
ನಿನ್ನ ನಗುವಿನ ಬೆಳಕ ಹಚ್ಚಿದೆ
ನಿನ್ನ ಸ್ನೇಹದ ಹೊಳಪ ಮೆಚ್ಚಿದೆ
ನಿನ್ನ ಭಾವಕೆ ಮನವು ಬಾಗಿದೆ

ಹಸೀನಾ, ನಿನ್ನ ಹೆಸರದು
ಅದುವೇ ಅದ್ಭುತ
ನಿನ್ನ ಒಲವಿಗೆ ನಾನು ಭಾವುಕ 
ಮಧುರ ಸ್ನೇಹದಿ ಕೈಯ್ಯ ಚಾಚುತ
ಹೇಳುತಿದೆ ಈ ವೀಣಾ Haseena I Miss U...
I wish to dedicate this poem to my friend Haseena. I am very very happy to have such a great friend.

Thursday 19 April 2012

ಬರುವೆಯಾ ಒಮ್ಮೆ


ಕನಸಲ್ಲಿ ಕರೆದೆ 
ಕನವರಿಕೆ ನಿನದೆ 
ಕಣ್ಣಲ್ಲಿ ಕರೆಯೊಮ್ಮೆ
ಮನಸೋತು ಗೆಳೆಯ..

ಕಂಡರಿಯದ ದಾರಿಯಲಿ 
ಬರಸೆಳೆದು ನಡೆ ಮುಂದೆ.
ನನ್ನೊಲವಿನ ನಡುವೆ 
ನಿನ್ನೊಮ್ಮೆ ಮರೆ ನೀನು ..

ಬರುವೆಯಾ.? ಗೆಳೆಯ..
ಮಬ್ಬು ಕತ್ತಲೆಯೊಳಗೆ 
ಬಿದಿಗೆ ಚಂದ್ರಮನಂತೆ.
ಮುಸ್ಸಂಜೆಯಲಿ ಕಾವೇರಿಯ 
ರವಿಕಿರಣ ಚುಂಬಿಸುವಂತೆ..

Thursday 15 March 2012

ನೆಪ..

ನೆಪದಲ್ಲಿ ಬಂದ 
ಸಂಬಂಧದ ಸಂಕೋಲೆ
ಬಿಡಿಸಲಾರದ ಕಗ್ಗಂಟು..
ಅಳೆದಷ್ಟು ಅಗಲ
ಬಗೆದಷ್ಟು ಬಹಳ
ಸ್ನೇಹದ ಆಸರೆಯು 
ಪ್ರೀತಿಯ ಸಿಂಚನವು 
ನಗುವಿನ ಅರಳುಮಲ್ಲೆ
ಹರಡಿರಲು ಮೆಲ್ಲಗೆ 
ನನ್ನಲ್ಲಿ ಚೇತನ
ದಿನದಿನವೂ ನೂತನ
ಹೀಗಿರಲು ಜೀವನ..
ನನ ಬದುಕು ಪಾವನ...

Wednesday 29 February 2012

ನೆನಪು

 
ಎಂದೋ ಮರೆತ ಹಾಡು 
ಗುನುಗುನಿಸುತಿದೆ ಇಂದು 
ಏನಿದರ ರಹಸ್ಯ 
ಅರಿಯಲಾರದೆ ಹೋದೆ 

ತಡಕಾಡಿದೆ ಮನವ
ಮಿಡುಕುತಿದೆ ಸಂದೇಹ
ಮಸುಕು ಬೆಳಕಲಿ 
ಜನರು ನಡೆಯುವಂತೆ .

ಇಹುದೊಂದು ಸತ್ಯ 
ಒಪ್ಪಲೂ ಮನಸ್ಸಿಲ್ಲ 
ಹೃದಯನಾಡಿಯ ಮಾತು 
ಒದರಿದಂತೆ..