Total Pageviews

Showing posts with label ಆಸೆ. Show all posts
Showing posts with label ಆಸೆ. Show all posts

Wednesday, 21 August 2013

ಇನಿದನಿ




ಇಂಪಾದ ಗಾನ ಕೇಳಿದಾಗೆಲ್ಲ
ಇನಿಯಾ ನಿನ್ನ 
ಇನಿದನಿಯ ಪಿಸುಮಾತು 
ಇಂಚಿಂಚಾಗಿ
ಇಳಿದು ಮನದೊಳಗೆ 
ಇಬ್ಬನಿಯ ಶುಷ್ಕದಲಿ
ಇಷ್ಟಿಷ್ಟೇ ತೋಯ್ದು ತೇವವಾದಂತೆ 
ಇಮ್ಮಡಿಸಿದವು ಆಸೆಗಳ
ಇಂಚರವಾಗಿ. . 


ಕಲ್ಪನೆಗಳ ಕವನಗಳು 
ಕನವರಿಕೆಯ ಕನಸುಗಳು 
ಕವಲೊಡೆದು ಕಾಡಿ 
ಕಟ್ಟಿಬಿಟ್ಟವು ಕಾಮನಬಿಲ್ಲ 
ಕನ್ನಡಿಯ ಅಂಚಲ್ಲಿ 
ಕಣ್ ಕೊರೈಸುವಂತೆ 
ಕದಡಿ ಹಲವು ಬಣ್ಣವಾಗಿ..  


ನೀ ಕೇಳಿದ ಒಗಟು
ನಿನ್ನಾಪ್ತತೆಯ ಭಾವುಕತೆ
ನೀಕೊಟ್ಟ ಮಾತು  
ನೀ ಬೆಸೆದ ಬಾಳ ಭಾಂದವ್ಯ
ನಿಸ್ವಾರ್ಥ ತುಂಬಿದ ಪ್ರೇಮ
ನಿನ್ನಾಗಿಸಿದೆ ನನ್ನ
ನಿಸ್ಸಂಶಯವಾಗಿ..

Thursday, 23 May 2013

ಸಾರ್ಥಕ ಬದುಕು



ನೀರಲ್ಲಿ ಅರಳಿದ
ಬಿಳಿಕಮಲದ ಮೊಗ್ಗೊಂದು
ನೂರ್ಮಡಿಸುವ ಆಸೆಯ
ಹೊತ್ತು ಅರಳುತಿದೆ ಬಿರಿದು
ಪಕಳೆಯಲಿ ನಸುಗೆಂಪು
ತನ್ನೊಳಗೆ ಹೊಸಕಂಪು
ತಂಗಾಳಿಯ ಹಿತಸ್ಪರ್ಷಕೆ
ನಗುನಗುತ ತಲೆದೂಗಿ
ಹೇಳಿದೆ ಭಾಸ್ಕರಗೆ ಶುಭೋದಯ..

ಬುಡದಲ್ಲಿ ಕರಿಗೆಸರು
ಸುತ್ತೆಲ್ಲ ಬಳ್ಳಿಗಳ ಅಡರು
ನಡುವಲ್ಲಿ ಪುಟ್ಟ
ಜೀವಿಗಳ ಸಂತಾನ
ಪರೋಪಕಾರಿಯು ಅಹುದು
ಹೂಗಳ ಅರಸಿ.

ಅಲೆಗಳ ಕುಲುಕಾಟ
ದೋಣಿಗಳ ತಿರುಗಾಟ
ಕೀಟಗಳದ್ದಂತೂ ಎಲೆ ಹೂವ
ಕೊರೆಯುತ ಆಹಾರದ ಹುಡುಕಾಟ
ಕ್ಷಮೆಯಾ ಧರಿತ್ರಿಯ ಮಗಳೇ
ನೀ ಸೌಖ್ಯಕಾರಿಣಿ.!

ಸೌಂದರ್ಯದ ರಾಶಿ ನೀ;
ರೂಪದಲಿ ರಾಣಿ .
ಸುರ-ದೇವತೆಗಳ ಆಸನವು
ನೀ ಚಂದ್ರಮುಖಿ
ಕ್ಷಣಿಕ ಬದುಕಲೂ ಪಡೆವೆ
ಸಾರ್ಥಕ್ಯದ ಪರಿಪೂರ್ಣತೆಯ
ಓ ಕಮಲವೇ ನೀ ನಿಜಕ್ಕೂ ಸೌಭಾಗ್ಯವತಿ.


                                 --- ಮೌನ ವೀಣೆ
ಚಿತ್ರ ಕೃಪೆ - ಅಂತರ್ಜಾಲ

Monday, 1 April 2013

ಕನಸಿನ ಮೌನಕ್ಕೊಂದು ಮಾತು ಬಂದಾಗ..











ಮಾತು ಬರದ ಮೌನಕ್ಕೆ ಕನಸಾದ ಬಗೆಯ ಒಂದು ಚಿಕ್ಕ ಕನಸಿನ ಕತೆ. ಹುಚ್ಚುಕೋಡಿಯ ತಲೆಯೊಳಗೆ ಚಿಕ್ಕದೊಂದು ಆಸೆಯ ಭಾವ, ಬಯಸುವ ಮನಸ್ಸಲ್ಲಿ, ನೆನೆಯುತ ಮಲಗಿದಲ್ಲಿ ಬೀಳುವುದು; sometime ಕಾಣೋದು ಅದೇ ಕನಸು, ಭ್ರಮಿಸಿಕೊಳ್ಳೋದು ಅದೇ ಅಂದರೂ ತಪ್ಪಾಗದು. ನಾವು ಎಂತಹ ಮರೆಗುಳಿ ವಂಶದವರೆಂದರೆ ಒಮ್ಮೊಮ್ಮೆ ಒಂದು ವಿಚಾರದ ಬಗ್ಗೆ ಚಿಂತಿಸಿ ನಿರ್ಧಾರ ತೆಗೆದುಕೊಳ್ಳಲು ಹಾಗೆ ಕಣ್ಮುಚ್ಚಿ  ಕುಳಿತು ಧ್ಯಾನಸ್ಥ ಸ್ಥಿತಿ ತಲುಪಿ ಆದರೆ-ಹೋದರೆ ಎಂಬ ಆಗು-ಹೋಗುಗಳ ಹತ್ತು ವಿಚಾರಗಳಲ್ಲಿ ಮುಳುಗಿ ನೈಜ ವಾಸ್ತವದ ವಿಚಾರ ಮರೆತು ಹೊಸದಾಗಿ ಬಂದ ಯೋಚನೆಗಳಿಗೊಂದು ಅಂತ್ಯ ಹಾಡಲು ಉದ್ಯುಕ್ತರಾಗಿ ಬಿಡುತ್ತೇವೆ. ಇಂತಹ ಪರಿಸ್ಥಿತಿಯಲ್ಲಿ ದಾಸರ ಒಂದು ಹಾಡು ನೆನಪಿಗೆ ಬರುತ್ತದೆ - ಈ ಮಾನವರು ಹೇಳುವುದು ಒಂದು ಮಾಡುವುದು ಇನ್ನೊಂದು ನಂಬೋದು ಹೇಗೆ ಕಾಣೆ ಪದ್ಮಾವತಿ ಪತಿ ತಿರುಪತಿ ಶ್ರೀವೆಂಕಟಚಲಪತಿ.. ಅಂತ.

ಒಮ್ಮೊಮ್ಮೆ ನನ್ನೊಳಗಿನ ಕಿಚ್ಚು ಹುಚ್ಚು ಅನಿಸಿಬಿಡುತ್ತದೆ. ಮನದೊಳಗೆ ಮೂಡಿದ ಭಾವನೆಗಳೂ ಭಾರ ಎನಿಸಿಬಿಡುತ್ತದೆ. ಮಾತಾಡುವ ವಾಚಾಳಿಯ ನಾಲಿಗೆ ಕೂಡ ಹೊರಳಲು ನರಳುತ್ತದೆ ಒಮ್ಮೊಮ್ಮೆ ತಾನಾಗಿ ಶಕ್ತಿ ತುಂಬಲು ಬಂದ ಉಸಿರನೂ ಕೂಡ ಹೊರದಬ್ಬಲು ಕಷ್ಟವೆನಿಸಿಬಿಡುತ್ತದೆ. ಅತ್ತು ಬಿಟ್ಟು  ಈ ತನುವಿನ ಕಷ್ಟ ಕಳೆಯೋಣವೆಂದರೆ ಹಾಳಾದ ಕಣ್ಣಿರು ಕೂಡ strike  ಮಾಡಿಬಿಡುತ್ತದೆ.  ಒಮ್ಮೊಮ್ಮೆ ನಮ್ಮೊಳಗಿನ ನಾನೆಂಬ ಸ್ವಾರ್ಥದ ಸ್ವಾಭಿಮಾನ ಹೆಮ್ಮೆ ಎನಿಸುತ್ತದೆ. ಒಮ್ಮೊಮ್ಮೆ ಸಂಗಾತಿ ಜೊತೆಗಾರನಿಲ್ಲವೆಂದು ಮರುಗುವ ಮನಸ್ಸು ಸುತ್ತಣ ಸಂಸಾರದ ಸಂಘರ್ಷಗಳ ನೋಡಿ single life has great comfort ಎಂದು ಎದೆಯುಬ್ಬಿಸಿ ತನ್ನೊಳಗೆ ಬೀಗಿಬಿಡುತ್ತದೆ. ಒಮ್ಮೊಮ್ಮೆ ಸತ್ಯ ಒಪ್ಪಿಕೊಳ್ಳಲು ಮನಸಾಲಾಗದೆ ಮಿಥ್ಯವೆಂದು ಸಾಧಿಸಿಬಿಡೋಣ ಎಂದೂ ಅನಿಸುವುದುಂಟು. ಒಮ್ಮೊಮ್ಮೆ ತೀರಾ ಚಿಕ್ಕ -ಪುಟ್ಟ ಗೆಲುವಿಗೂ ನಲಿಯುವ ಮನಸ್ಸು ದೊಡ್ಡ ಗೆಲುವಾದರೂ ಅಂತರ್ಮುಖಿಯಾಗಿಬಿಡುತ್ತದೆ. ಒಮ್ಮೊಮ್ಮೆ ಜೀವನ  ಸಹಜ -ಸುಂದರ, ಅದ್ಭುತ!!. ಈ ಸಂಬಂಧ - ಬಾಂಧವ್ಯಗಳು ಎಷ್ಟು ಖುಷಿಯಾಗಿಸುತ್ತಪ್ಪಾ ಎಂದು ಉಬ್ಬಿ ಬಿಡುವ ನಾವುಗಳು; ಒಮ್ಮೊಮ್ಮೆ ತುಂಬಾ ವೇದಾಂತಿ ತತ್ವಜ್ಞಾನಿಯಂತೆ ಏನಿದೆ ಜೀವನದಲ್ಲಿ ಹುಟ್ಟು-ಸಾವುಗಳು ನಡುವಲ್ಲಿ ಸ್ವಲ್ಪದಿನ(ಜಟಕಾಬಂಡಿ) ಒಂದಷ್ಟು ಸ್ವಾರ್ಥ ದುರಾಸೆಗಳ ಜಂಜಾಟದ ಜಗಳಗಳು, ತುತ್ತಿಗಾಗಿ ಒಂದಷ್ಟು ಓದು - ನೌಕರಿ - ಪೆನ್ಷನ್ - ಲೈಫ್ settlement ಹೀಗೆ ಒಂದಷ್ಟು ಬದುಕಿನ ಹೋರಾಟ. ಇಷ್ಟಾದ ಮೇಲೂ ಈ ಜೀವನ ನಶ್ವರ; ಒಮ್ಮೊಮ್ಮೆ ನಾವು ಮನುಷ್ಯರಾಗಿದ್ದೇವೆ, ನಮಗೆ ನಮ್ಮದೇ ಒಂದಷ್ಟು ಸ್ವಾತಂತ್ರ್ಯ, ಮಾತುಗಳು ಬರ್ತಾವೆ, ಹಲವು ಭಾಷೆಗಳಲ್ಲಿ ಬರಿತೇವೆ, ಟೆಕ್ನಾಲಜಿ ಬೆಳೆಸಿದ್ದೇವೆ, ಕಂಪ್ಯೂಟರ್, ಮೊಬೈಲ್, ಉಪಗ್ರಹಗಳು ಅದೂ ಇದೂ ಒಂದಷ್ಟು ಮಣ್ಣು ಮಸಿ ಕಲ್ಪಿಸಿಕೊಂಡು ನಾವು ಲಕ್ಕಿಗಳು, ಬುದ್ದಿಜೀವಿ, ಶ್ರೇಷ್ಟರು ಎಂದು ಬಿರುದು ಕೊಟ್ಟು ಕೊಂಡು ಬಿಡುತ್ತೇವೆ. ಒಮ್ಮೊಮ್ಮೆ ಏನಪ್ಪಾ..??! ನಾವು ಒಂಥರಾ ಅವಲಕ್ಕಿಗಳೇ!! ಎಲ್ಲೆಡೆಯೂ ಸ್ವಾರ್ಥ, ಮೋಸ, ಕಪಟತನ, ಈ
ಹೊಲಸು ಪ್ರಾಣಿಗೆ ಇರುವಷ್ಟು ದುರಾಸೆ ಬೇರಾವ ಜೀವ ಪ್ರಭೇದಗಳಲ್ಲು ಇಲ್ಲವೆಂದೆನಿಸಿ ನಾವೇ ಹುಂಬರು, ಮೂರ್ಖರು ಎಂದೆನಿಸುವುದೂ ಉಂಟು. 

ಆಸೆಗಳು ಆಕಾಶದ ಹಾಗೆ. ಹಿಡಿಯಲಾಗದ ಹೊಳೆಯುವ ಗಂಟು. ಅದಕ್ಕಾಗಿಯೆ ಜನ ಆಕಾಶ ನೋಡಿ ಹತ್ತು ಹಲವು ಕಲ್ಪಿಸಿಕೊಂಡು ಕನಸಿನ ಪುಷ್ಪಕ ಕಟ್ಟುತ್ತಾರೆ. ತಾರೆಗಳ ಜೊತೆ, ಚಂದ್ರನ ಜೊತೆ ಸೇರುವ ಗೆಳೆತನದ ಅನುಭೂತಿಯ ಭಾವ ಹೊಂದುತ್ತಾರೆ. ಕಲ್ಪನೆಯ ಪ್ರೀತಿಸಿ, ಮೋಹಿಸುತ ಆರಾಧಿಸಿ ಕನಸಿನ ಬೃಂಗವ ಏರಿ ಕವಿ ಎನಿಸಿಕೊಂಡುಬಿಡುತ್ತಾರೆ. ರಕ್ತ ಒತ್ತುವ ಹೃದಯದಲ್ಲಿ ರಂಗೋಲಿ ಬರೆದು ಅವರು ಬಯಸುವ ಪ್ರೇಮದ ವಸ್ತುವ ಬರಮಾಡಿ ಕಲ್ಪನೆಯ ಕನಸಲ್ಲಿ ಕಳೆದುಹೋಗುತ್ತಾರೆ. ಅಯ್ಯೋ.. !!!  ಸಾಕಲ್ಲವೇ?? ಎಷ್ಟು ಅಂತ ಕಲ್ಪಿಸಿಕೊಂಡು ಕನಸ್ ಕಾಣೋದ್ ಹೇಳಿ?? ಕೆಲಸವಿಲ್ಲದಿದ್ರೆ ಆಗೋದ್ ಇದೆ ಅಲ್ಲವೇ ?? ಮತ್ತೇನಾಗುತ್ತೆ??


ಹಸಿರಾಗಿರಲಿ ಬದುಕು ಖುಷಿಯಲ್ಲಿ ಕರಗಿ..
ನೂರ್ಮಡಿಸಿ ಚಿಮ್ಮುತಿರಲಿ ಕನಸುಗಳ ಹುಚ್ಚಾಸೆಯ ಅಲೆಗಳು...


ಒಂದು ಪುಟ್ಟ ಆಸೆಯ
ಕನಸು
ಕನಸೊಳಗೆ ಕನಸುಗಳಿಗೆ
ಕಾವ್ ಕೊಟ್ಟು
ಹೊಸದತ್ತು ಕನಸುಗಳ
ಹುಟ್ಟಾಕಿ ಕನಸಲ್ಲಿ
ಆ ಕನಸಲ್ಲಿ ಹೊಸ
ಆಸೆಯ ಕನಸಿನ ಬೀಜ
ತಂತಾನೆ ಮೊಳೆತು ಸಸಿಯಾಗಿ
ಗಳಿಗೆಗಳಿಗೆಗಳೊಳಗೆ ಬೆಳೆಬೆಳೆದು
ಹೆಮ್ಮರವಾಗಿ ಆ ಕನಸೇ
ತನ್ನೊಳಗೆ ತನ್ನ ಕನಸನು
ಬೆಳೆಸುವ ಹುಚ್ಚಾಸೆಯ
ಇನ್ನೊಂದು ಕನಸನು ಕಂಡು
ಕಣ್ತೆರೆವ ಮನಸಿರದೆ
ಕನಸಾಗುತಿರುವಾಗ
ವಾಸ್ತವದ ನೆನಪ ಬರಿಸಿತು
ನನ್ನ ಹಿತ ಬಯಸುವ ಶತ್ರು
ಅಲರಾಂನ ಗಂಟೆ ಹೊಡೆದುಕೊಳ್ಳಬೇಕೆ??!!
ಗಂಟೆ ಏಳಾಯಿತು ಎಂದು
ಪಕ್ಕದ ಮನೆಯ ಆಂಟಿ
ಟ್ಯೂಶನ್ ಗೆ ಮಗನ ಕಳಿಸಿ
ಟಾಟಾ ಮಾಡುವ ಸೌಂಡು ಕಿವಿಗೆ
ಅಪ್ಪಳಿಸಿದಾಗಲೇ ನೆನಪಾದ್ದು
Sunday ಅಲ್ಲ ಇಂದು Monday ಎಂದು
.


HaPPy TiMeS....
         EnJoY ThE SwEeT DrEaMs..

Wednesday, 2 January 2013

ದಯವಿಟ್ಟು ಸಹಾಯ ಮಾಡಿ - ಪುಟ್ಟ ಜೀವ ಬದುಕಲಿ

'ನಾನು ಮತ್ತು ನನ್ನ ಕನಸು' ಇವೇ  ನನ್ನಯ ಬದುಕು ಎಂಬಂತೆ ಛಲದಲ್ಲಿ ಬದುಕುತ್ತಿರುವ ಜನ ನಮ್ಮ ಶಂಕ್ರಣ್ಣ ( ಶಂಕರ ಭಟ್ ). ಸಾರ್ಥಕ್ಯದ ಜೀವನ. ಪ್ರತಿಯೊಬ್ಬರ ಕನಸು - ತಾನು ಮತ್ತು ತನ್ನದೊಂದು ಕುಟುಂಬ, ತನ್ನ ಮಕ್ಕಳು, ಒಂದು ಪುಟ್ಟ ಮನೆ, ಬದುಕಿಗೊಂದಿಷ್ಟು ಸಣ್ಣ ಆದಾಯ , ಆ ಆದಾಯಕ್ಕನುಸಾರ ಖರ್ಚುಗಳು , ಒಂದಿಷ್ಟು ಆಸೆಗಳು, ಕೈಗೂಡಿಸಲು ಪ್ರಯತ್ನ ಅವುಗಳ ಜೊತೆ ಒಂದಿಷ್ಟು ಸಮಾಧಾನ ತೃಪ್ತಿಗಳು . ಆದರೆ ತಾನೊಂದು ಬಗೆದರೆ ದೈವ ಬೇರೊಂದೇ ಬಗೆಯುವುದು ಎಂಬಂತೆ "ಥಲಸ್ಸೆಮಿಯ ಮೇಜರ್" ಅನಾರೋಗ್ಯದ ಭೂತ ಅವನ ಪುಟ್ಟ ಕಂದಮ್ಮನ ಬೆನ್ನತ್ತ ಬೇಕಾ ? ಲಕ್ಷಕ್ಕೊಬ್ಬರಿಗೆ ಬರುವುದಂತೆ ಆ ಕಾಯಿಲೆ; ಆ ಪುಟ್ಟಮ್ಮನಿಗೇ ಬರಬೇಕಾ ? ಪಾಪ ಕಳೆದ ೩ ವರ್ಷಗಳಿಂದ ಅವಳ ಕಾಯಿಲೆಯ ಹತೋಟಿಗೆ ಅವರು ಪಟ್ಟ ಪಾಡು ಅವರಿಗೆ ಗೊತ್ತು ಮತ್ತು ದೇವರಿಗೆ ಗೊತ್ತು. ಅವಳಿಗೆ ತನಗಾದ ಕಾಯಿಲೆಯ ಹೆಸರ ಹೇಳಲೂ ಬಾರದ 5th ಕ್ಲಾಸಿನ ಪುಟ್ಟ ಪೋರಿಗೆ ಬಂದಿದೆ ಎಂಬುದು ವಿಷಾದನೀಯ. ಖಾಯಂ ಆಗಿ ಆಕೆಯ ಜೀವದಲ್ಲಿ ರಕ್ತ ಉತ್ಪತ್ತಿಯಾಗಲು ಉತ್ತಮ ಚಿಕಿತ್ಸೆಯ ಅವಶ್ಯಕತೆಯಿದೆ ಮತ್ತೆ ಅದಕ್ಕೆ ತಗಲುವ ವೆಚ್ಚವೂ ಬಹಳ ದೊಡ್ಡದು(೨೦ ಲಕ್ಷ).ಸಣ್ಣ ಬಡ ರೈತ ಎಷ್ಟರ ಮಟ್ಟಿಗೆ ಹೊಂದಿಸಲು ಸಾದ್ಯ ನೀವೇ ಹೇಳಿ? ದಯವಿಟ್ಟು ನಿಮ್ಮಗಳ ಹಣದ ಋಣ ಆ ಪುಟಾಣಿ ಮೈತ್ರಿಗಿರಲಿ. ನಿಮ್ಮನೆಯ ಹುಡುಗಿಗೆ ನೀವು ಸಹಾಯ ಮಾಡಲಾರಿರಾ? ಹೇಳಿರುವುದು ಸುಳ್ಳು ಮೋಸ ಎಂದೆನಿಸಿದರೆ ವಿಚಾರಿಸಿಯೇ ಮುಂದುವರೆಯಿರಿ. ದೇವರು ಒಳ್ಳೆಯದು ಮಾಡಲಿ. 




ಬಾಲಕಿಯ ಚಕಿತ್ಸೆಗೆ ನೆರವಾಗುವವರು ಸಂಪರ್ಕಿಸಿ -

ಶಂಕರ ಭಟ್
Ph. 8762759505
ವಿಜಯಾ ಬ್ಯಾಂಕ್ ಯಲ್ಲಾಪುರ SB A/C - 1226010011000314
ಕರ್ನಾಟಕ ಬ್ಯಾಂಕ್ SB A/C - 352250010021501

https://www.facebook.com/shankar.bhat.940


ಹೊಸ ವರುಷ
ಹೊಸ ಆಸೆ
ಹೊಸತನದ ಸ್ಪುರಣೆಯಲಿ
ಹೊಸ ಮೈತ್ರಿಯ
ಹೊಂಗನಸ ಕೈಗೂಡಿಸುವ ತೃಷೆಯಲ್ಲಿ
ನಿಮ್ಮ ಪ್ರೀತಿ ಹಾರೈಕೆ
ನಿಮ್ಮ ಋಣಗಳು ಜೊತೆಯಿರಲಿ
ಈ ಮೈತ್ರಿಯ ಬಾಳಿನಲಿ
ಬೆಳಗಲಿ ಉತ್ಸಾಹದಿ 
ಅವಳೆಲ್ಲ ನಾಳೆಗಳು ಎಂದು ಹಾರೈಸೋಣ...

                      -- ಮೌನ ವೀಣೆ

Monday, 31 December 2012

ಹೊಸ ವರ್ಷದ ಹಾರ್ಧಿಕ ಶುಭಾಶಯಗಳು







ಹೊಸ ವರ್ಷದ ಹೊಸದಿನ
ಹೊಸ ಆಸೆಗಳೆಲ್ಲ ಹೊಸೆದುಕೊಳ್ಳಲಿ
ಈ ದಿನದಿಂದ ನಿಮ್ಮಾಸೆಗಳೆಲ್ಲ
ಹುಸಿಯಾಗದೆ ಹಸಿರಾಗಲಿ
ಈ ಕ್ಷಣದಿಂದ ನಿನ್ನ ಕನಸುಗಳೆಲ್ಲ ನನಸಾಗಲಿ
ಬದುಕು ಬಂಗಾರವಾಗಲಿ. 

ಹೊಸ ವರ್ಷದ ಶುಭಾಶಯಗಳು..
                 -- ಮೌನ ವೀಣೆ


Wednesday, 8 August 2012

ನನ್ನ ಅಮ್ಮನೇ..



ಅಮ್ಮ ನಿನ್ನ ಕನಸನೊಂದ 
ನನಸು ಮಾಡೋ
ಆಸೆ ನನಗೆ
ಬೆಟ್ಟದಷ್ಟು ಪ್ರೀತಿ ಕೊಟ್ಟು
ಎತ್ತಿ ನಗಿಸಿ 
ತುತ್ತು ಕೊಟ್ಟೆ
ಅಳುವ ಮೊಗಕೆ ಮುತ್ತು ಕೊಟ್ಟು
ಬೆಳೆಸಿ ಜೀವ ಮಮತೆ ಇಟ್ಟೆ.

ನಿನ್ನ ಬದುಕ ಬತ್ತಿ ಮಾಡಿ
ನನ್ನ ಬದುಕು ಬೆಳಗಲೆಂದು
ಕಷ್ಟ ಕೋಟಿ
ಛಲದಿ ತಡೆದೆ 
ನನ್ನ ದೈವವೇ ..

ನಿನ್ನ ಆಸೆ ಮರೆತು ಹಾಡಿ
ಕನಸು ಗುರಿಯ 
ಹಸನು ಮಾಡಲೆಂದು
ದುಡಿದೆ ಮನಸು ಮಾಡಿ
ನನ್ನ ಅಮ್ಮನೇ..